All content for Dr Balakrishna Maddodi is the property of Balakrishna Maddodi and is served directly from their servers
with no modification, redirects, or rehosting. The podcast is not affiliated with or endorsed by Podjoint in any way.
ಒಬ್ಬ ವ್ಯಕ್ತಿ ನಮಗೆ ಮಹಾನ್ ಎಂದೆನಿಸಿದಾಗ ನಾವು ಕೇವಲ ಅವರ ಹಿಂಬಾಲಕರಾಗಿರುತ್ತೇವೆ. ಆ ಮಹಾನ್ ವ್ಯಕ್ತಿಯ ಕಾರ್ಯವನ್ನು ಅಭ್ಯಸಿಸಿ ಅಲ್ಲಿನ ಮೌಲ್ಯಗಳನ್ನು ಅರಿತುಕೊಂಡಾಗ ಪುನೀತರಾಗುತ್ತೇವೆ. ವಾಲ್ಮೀಕಿ ಮರ್ಹರ್ಷಿಗಳು ರಚಿಸಿದ ರಾಮಾಯಣವು ಆದಿಕಾವ್ಯವೆನಿಸಿದೆ. ಹಲವಾರು ರಾಮಾಯಣಗಳು ಕಾಲಾನುಕ್ರಮದಲ್ಲಿ ರಚಿತವಾಗಿದ್ದರೂ ಇವೆಲ್ಲವೂ ವಾಲ್ಮೀಕಿ ರಾಮಾಯಣವನ್ನೇ ಅನುಸರಿಸಿ ಬಂದಂತಹವು. ಯಾವುದೇ ಕವಿ ರಾಮಾಯಣವನ್ನು ಬರೆಯುವಾಗಲೂ ವಾಲ್ಮೀಕಿಯನ್ನು ಅನುಸರಿಸದೇ ಇಲ್ಲ.
ವಾಲ್ಮೀಕಿ ಮಹರ್ಷಿಗಳಾಗುವುದಕ್ಕೆ ಮುಂಚಿನ ಬದುಕಿನ ಬಗ್ಗೆ ಒಂದು ಐತಿಹ್ಯವಿದೆ. ಅವರ ಮೊದಲ ಹೆಸರು ರತ್ನಾಕರ ಎಂದಿತ್ತು. ಈ ರತ್ನಾಕರ ಒಳ್ಳೆಯ ಮನೆತನದಲ್ಲಿ ಜನಿಸಿದ್ದನಾದರೂ ದರೋಡೆಕೋರರ ಸಂಗದಲ್ಲಿ ಇದ್ದುದರಿಂದ ದರೋಡೆ, ಕೊಲೆಗಳನ್ನು ಮಾಡತೊಡಗಿದ್ದನು. ಇದೇ ಆತನ ಜೀವನ ನಿರ್ವಹಣೆಯ ಕಸುಬೂ ಆಗಿಹೋಗಿತ್ತು. ಒಂದು ದಿನ ರತ್ನಾಕರನ ಎದುರಿಗೆ ನಡೆದು ಬಂದವರು ದೇವಋಷಿ ನಾರದರು. ರತ್ನಾಕರ ನಾರದರಿಗೆ ಹೇಳಿದನು – “ನಿನ್ನಲ್ಲಿ ಇದ್ದುದೆಲ್ಲವನ್ನು ನನಗೆ ಕೊಟ್ಟುಬಿಡು. ಇಲ್ಲದಿದ್ದರೆ ಪ್ರಾಣವನ್ನು ಕಳೆದುಕೊಳ್ಳುತ್ತೀಯ!”
ನಾರದರು ನುಡಿದರು – “ನನ್ನ ಬಳಿ ಈ ವೀಣೆ ಮತ್ತು ತೊಟ್ಟ ವಸ್ತ್ರಗಳ ಹೊರತಾಗಿ ಇನ್ನೇನೂ ಇಲ್ಲ. ನಿನಗೆ ಬೇಕಿದ್ದರೆ ತೆಗೆದುಕೊಳ್ಳಬಹುದು. ಆದರೆ ನೀನು ಇಂತಹ ಕ್ರೂರಕರ್ಮವನ್ನು ಮಾಡಿ ಭಯಂಕರವಾದ ಪಾಪವನ್ನು ಏಕೆ ಮಾಡುತ್ತಿರುವೆ?”. ದೇವರ್ಷಿಗಳ ಕೋಮಲವಾದ ಮಾತಿನಲ್ಲಿ ಅದೆಂತಹದ್ದೋ ಮೋಡಿಯಿತ್ತು. ರತ್ನಾಕರನಾದರೋ ಇಂತಹ ಸುಮನೋಹರ ಧ್ವನಿಯನ್ನು ಎಂದೂ ಕೇಳಿದ್ದೇ ಇಲ್ಲ! ಆತನ ಕಠೋರ ಹೃದಯ ಕರಗಿತು. ಅವನು “ಸ್ವಾಮಿ! ಪಾಪ ಎಂದರೇನು? ನನಗೆ ಜೀವನಕ್ಕೆ ಇದೇ ಸಾಧನೆಯಾಗಿದೆ. ಇದರಿಂದಲೇ ನಾನು ನನ್ನ ಪರಿವಾರವನ್ನು ಸಾಕುತ್ತಿರುವುದು”.
ನಾರದರು ಹೇಳಿದರು – “ನೀನು ಮೊದಲಿಗೆ ಮನೆಗೆ ಹೋಗಿ ‘ನಿನ್ನ ಪರಿವಾರದವರು ಕೇವಲ ನಿನ್ನ ದುಡಿಮೆಯ ಪಾಲು ಬಯಸುತ್ತಾರೆಯೋ, ಅಥವಾ ನಿನ್ನ ಪಾಪದಲ್ಲಿಯೂ ಸಹಭಾಗಿಗಳಾಗಿರುವರೋ’ ಎಂದು ಕೇಳಿ ಬಾ, ನೀನು ಮರಳಿ ಬರುವವರೆಗೆ ನಾನು ಇಲ್ಲೇ ಇರುವೆನು. ಎಲ್ಲಿಗೂ ಹೋಗುವುದಿಲ್ಲ. ನಿನಗೆ ನಂಬಿಕೆ ಇಲ್ಲದಿದ್ದರೆ ನನ್ನನ್ನು ಒಂದು ಮರಕ್ಕೆ ಕಟ್ಟಿಹಾಕು”.
ರತ್ನಾಕರನು ನಾರದರನ್ನು ಕಟ್ಟಿಹಾಕಿ ತನ್ನ ಮನೆಗೆ ಹೋದನು. ಅವನು ತನ್ನ ಕುಟುಂಬದವರನ್ನೆಲ್ಲಾ ಕೇಳಿದನು – “ನೀವೆಲ್ಲರೂ ನನ್ನ ಪಾಪದಲ್ಲಿ ಭಾಗಿಗಳಾಗುವಿರೋ, ಅಥವಾ ಕೇವಲ ನನ್ನ ಸಂಪತ್ತಿಗೆ ಪಾಲುದಾರರೋ?” ಅವರೆಲ್ಲರೂ ಹೇಳಿದ್ದು ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿತ್ತು – “ಒಡಲ ಹೊರುವುದು ಗೊತ್ತು, ಪಾಪ ನಿಮ್ಮಯ ಸೊತ್ತು”. ‘ನೀನು ಯಾವ ರೀತಿಯಿಂದ ಧನವನ್ನು ತರುವೆಯೋ ಅದು ನಿನಗೆ ಗೊತ್ತು. ನಾವು ನಿನ್ನ ಪಾಪದಲ್ಲಿ ಹೇಗೆ ತಾನೇ ಪಾಲುದಾರರಾದೇವು’!